ಪೋಸ್ಟ್‌ಗಳು

ಕನಸುಗಳು

ಇಮೇಜ್
🔊 Click here for audio recitation ಬೆಚ್ಚನೆಯ ನಿನ್ನೆಗಳ ಕಂಬಳಿಯ ನಾ ಹೊದ್ದು ಕನಸುಗಳನರಸುವೆನು ಕಣ್ಣ ಮುಚ್ಚಿ॥ ಬಲು ಭಾರದಾ ಕಂಬಳಿಯ ನಾ ಬಿಚ್ಚಿ ಈ ಬಿಸಿಯೊಳು ನಾ ಹೊದ್ದುದೇಕೆ? ಬೆವರುತಿಹೆ ಕನಸಿನೊಳು ಹಿಂದಿನದ ನೆನೆಯುತ್ತ ನಿನ್ನೆಗಳಿಗಿದು ಎಂಥ ಪರಿತಾಪವು? ಬೆಚ್ಚನೆಯ ನಿನ್ನೆಗಳ ಕಂಬಳಿಯ ನಾ ಹೊದ್ದು ಕನಸುಗಳನರಸುವೆನು ಕಣ್ಣ ಮುಚ್ಚಿ॥ ಬಯಲಿನ ಚಳಿಗೆ ಇಂದು ಕಂಬಳಿಯ ಬಯಸಿದೆನು ಮೈಗೆಲ್ಲ ಮುದಕೊಟ್ಟು ಶಾಖವಿತ್ತು। ಹಿಂದೆಗೈದಾ ಸುಕೃತ ಮರಳಿ ನನ್ನನು ಸುತ್ತಿ ಕಾಪಾಡುತಿಹುದೇನು ರಕ್ಷೆಯಿಟ್ಟು? ಬೆಚ್ಚನೆಯ ನಿನ್ನೆಗಳ ಕಂಬಳಿಯ ನಾ ಹೊದ್ದು ಕನಸುಗಳನರಸುವೆನು ಕಣ್ಣ ಮುಚ್ಚಿ॥ ಒಮ್ಮೊಮ್ಮೆ ಬೇಸರವು ಬೇಡೆನಗೆ ಕಂಬಳಿಯು ತಳ್ಳಿದೆನು ಕಂಬಳಿಯನಾಚೆ ನಾನು  ಅದರ ಆಸರೆಯು ಬೇಕೇನು ಇಂದೆನಗೆ ನೋಡುವೆನು ಹೊಸ ಕನಸ ನಾಳೆಗೆಂದು॥ ನಿನ್ನೆಗಳ ಕಂಬಳಿಯು ಬೇಡವಿನ್ನೋ  ಜಾಣ ಹೊಸ ಕನಸುಗಳನರಸುವೆನು ಕಣ್ಣ ಮುಚ್ಚಿ॥

“ಕಳೆದ” ಸ್ನೇಹ

ಇಮೇಜ್
🔊Click here for audio recitation ಹಿಂದೆ ಕಳೆದ ದಿನಗಳನು ನೆನೆದು ಇಂದು ನನ್ನ ನಾ ಕೇಳಿದೆ - ಎಂದು ಹೇಗೆ ಕಳೆದು ಹೋಯ್ತು ಸಂ ದ  ಸ್ನೇಹ ಸಲಿಗೆಯು? ಬಿಚ್ಚಿ ಮಾತನಾಡುತ್ತಿದ್ದ ಹೃದಯದಾಳದಿಂದ ಬಂದ ಚಿಕ್ಕ ಮಾತಿಗೆಲ್ಲ ನಕ್ಕ ಎಂದು ಹೇಗೆ ಕಳೆದು ಹೋಯ್ತು? ಸಂ ದ  ಸ್ನೇಹ ಸಲಿಗೆಯು? ಚುಚ್ಚಿ ಮೌನದಿಂದ    ಮನವು ಸಿಹಿಯ ಬಿಟ್ಟು ಕಹಿಯನುಂಡು ಎರಡು ದಡದಂಚಲ್ಲಿ ನಿಂದು ನಡುವೆ ಕಾಲ ನದಿಯು ಹರಿದು ಎಂದು ಹೇಗೆ ಕಳೆದು ಹೋಯ್ತು ಸಂ ದ  ಸ್ನೇಹ ಸಲಿಗೆಯು? ತಿಳಿಯಲಿಲ್ಲ ಅರಿಯಲಿಲ್ಲ ಎಂದು ಸಂದು ಬಿರುಕುಬಿಟ್ಟು ಬಿರುಕು ಇಂದು ಕಣಿವೆಯಾಗಿ ಇತ್ತ ನಾನು, ಅತ್ತ ನೀನು ಎಂದು ಹೇಗೆ ಕಳೆದು ಹೋಯ್ತು ಸಂ ದ  ಸ್ನೇಹ ಸಲಿಗೆಯು? ನನ್ನ ಬೆಟ್ಟದಲ್ಲಿ ನಾನು  ನಿನ್ನದರಲಿ ನಿಂದೆ ನೀನು ದೂರ ನೋಟದಲ್ಲಿ ಕಂಡು ಕೂಗಿಗೆಲ್ಲ ಪ್ರತಿಧ್ವನಿಯು ಎಂದು ಹೇಗೆ ಕಳೆದು ಹೋಯ್ತು ಸಂ ದ  ಸ್ನೇಹ ಸಲಿಗೆಯು? ಮರೆಯಲಿಲ್ಲ ಗೆಳೆಯ ನಿನ್ನ ನನ್ನ ನೀನೂ ಮರೆತೇ ಇಲ್ಲ. ನನಗೂ ನಿನಗೂ ಬಿಡುವೆಯಿಲ್ಲ ಎಂದು ನಾವೇ ಅಂದುಕೊಳುತ ಹೀಗೇ ಕಳೆದು ಹೋಗಲೇ ಜಾಣ ಆ ಸ್ನೇಹ ಸಲಿಗೆಯು?

ಉಗಾದಿ

ಇಮೇಜ್
  🔊 Click here and listen to audio recitation ಚಂದ್ರನಡಿಗೆ ನಮ್ಮ ನಡಿಗೆ ಇದು ಶುಕ್ಲ ಕೃಷ್ಣ ತಾಳಕೆ। ಋುತುಚಕ್ರವು ಉರಳಿತು ತಂದಿತು ಉಗಾದಿಯು॥ ಮಾಗಿ ಮಾಗಿ, ಗ್ರೀಶ್ಮ ಬಂದು ತರುಲತೆಗೆ ಶೋಭೆ ತಂದು। ಮಾವು, ಬೇವು ಬೇರೆನ್ನದೆಯೆ ಎಲ್ಲದಕ್ಕು ಹಸಿರನುಡಿಸಿ, ಋುತುಚಕ್ರವು ಉರಳಿತು ತಂದಿತು ಉಗಾದಿಯು॥ ಎಳೆಯ ಹಸಿರು ಹೊಸೆದುಸಿರು ಕೋಗಿಲೆಗೂ ಗಾನ ಹುರುಪು। ಮಾವಿನಡಿಯ ನೆರಳಿನಲ್ಲಿ ಪಂಚಮದಲಿ ಹಾಡಿದೆ, ಋುತುಚಕ್ರವು ಉರಳಿತು ತಂದಿತು ಉಗಾದಿಯು॥ ಸಿಹಿ ಕಹಿಯು ಜಿಹ್ವ ಸತ್ಯ ಕಷ್ಟ ಸುಖವು ಅನುಭವದ ಸತ್ಯ। ಮರಮರಳಿ ಸುತ್ತ ಸುತ್ತಿ ಮಾಯೆ, ಸತ್ಯಗಳನು ಕದಡಿ ಜಾಣ ಮತ್ತೆ ಪೇಳಿದ ಋುತುಚಕ್ರವು ಉರಳಲಿ ಬರಲಿ ಮತ್ತೆ ಉಗಾದಿಯು॥ - ನಾ ಶ್ರೀ ಮೋ

ಕಾಲ

ಇಮೇಜ್
  ಕಾಲಾನಂತ ಎಂದು ಅದಕೆ  ಇಲ್ಲ ಆದಿ ಅಂತ್ಯವು| ಆದಿ ಅಂತ್ಯವಿರದ ಕಾಲ ಎಂದು ಸತ್ಯವು| ಕಾಲ ಸತ್ಯ ಇಂದಿಗಿಂದು  ಕಾಲ ಬಹಳ ಕ್ಷಣಿಕವು| ಕ್ಷಣದ ಕಾಲ ಕಳೆದು ಹೋಗೆ  ಬೊಗಸೆ ನೀರಿನಂದದಿ| ಹಿಡಿಯ ಹೋದೆ ಜಾರಿ ಹೋಯ್ತು  ನನ್ನ ಬೆರಳ ಸಂದಲಿ॥ ಮರಳಿ ಕೈಯನದ್ದಿ ಹಿಡಿದೆ ಮತ್ತೆ ಬೊಗಸೆ ನೀರನು| ತಿಳಿತಿಳಿದೂ ನೀರು ನುಸುಳಿ ಹೋಗುವುದದು ಕ್ಷಣದಲಿ| ಕ್ಷಣಿಕ ನೀರ ಹಿಡಿಯುವಾಸೆ, ಹಿಡಿದ ನೀರ ಕುಡಿಯುವಾಸೆ| ತಣಿಸುವುದು ಒಣ ಕಂಠವ ತೃಪ್ತನಾದೆ, ನಿರ್ಲಿಪ್ತನಾದೆ ಮಾಯವಾದ ನೀರ ನೋಡೆ ತಿಳಿದೆ ಜಾಣ ಸತ್ಯವ॥ - ನಾ ಶ್ರೀ ಮೋ

ಮರ

ಇಮೇಜ್
  Click here for audio recitation 🔊 🔊 Click here for Music Video of this song ಮರವಾಗಿ ಇರಬೇಕು ನಾನು ಈ ಧರೆಯೊಳಗೆ ಚಂದದ ತರುವಿನಿಂ ಜೀವನದ ಅರಿವಾಗೆ ಮರವಾಗಿರ ಬೇಕು ನಾನು ಈ ಧರೆಯೊಳಗೆ॥ ಆಳ ಆಳಕೆ ಹೊಕ್ಕಿ ಧರಣಿಯೊಳು ಧೃಡವಾಗಿ ಹರಡಿ ಈ ಭುವಿಯೊಳಗೆ ಭದ್ರ ಬುನಾದಿಯೆನಿಪ। ಬಲು ಹಳೆಯ ಕಾಣದಾ ಬೇರನು ನಾ ಹೊಂದಿ  ಮರವಾಗಿರಬೇಕು ನಾನು ಈ  ಧರೆಯೊಳಗೆ॥ ಮೇಲ್ಮೇಲಕೆ ಏರಿ ಗಗನದಲಿ ವಿಸ್ತರಿಸಿ ಚಾಮರದಂತೆ ಚಾಚಿ ದಿಕ್ಕುಗಳ ದಿಕ್ಕರಿಪ। ಹಚ್ಚ ಪಚ್ಚೆಯ ಹುರುಪ ತೋರುವ ಮರವಾಗಿರಬೇಕು ನಾನು ಈ  ಧರೆಯೊಳಗೆ॥ ಥಕ ಥೈಯೆಂದು ತಂಗಾಳಿಯಲಿ ನೃತ್ಯವನಾಡಿ ಬಿರುಗಾಳಿಯಲಿ ಧೃತಿಗೆಡದೆ ಛಲದಿನಿಂತಿರ್ಪ। ಸದೃಡ ಸಶಕ್ತ ಕೊಂಬೆ ಕಾಂಡಗಳ ಬಲದಲ್ಲಿ ಮರವಾಗಿರಬೇಕು ನಾನು ಈ  ಧರೆಯೊಳಗೆ॥ ಚಿಲಿ ಪಿಲಿ ಹಕ್ಕಿಗಳ ಗೂಡಿಗಾಶ್ರಯವಾಗಿ ಹರಡಿ ಛಾಯೆಯ ಚೆಲ್ಲಿ ಪಯಣಿಗಗೆ ತಣಿಪ। ದಾರಿಯಲಿ ಗುರುತಾಗಿ ಸುತ್ತ ಕಟ್ಟೆಯನಿಟ್ಟ ಮರವಾಗಿರ ಬೇಕು ನಾನು ಈ  ಧರೆಯೊಳಗೆ॥ ಮುದದಿ ಒಂದು ದಿನ ಮುಂದೊಮ್ಮೆ ಮುದಿಯಾಗಿ ಹೇಗಾದರೂ ಸರಿಯೆ ಇತರರಿಗೆ ಆಸೆಯ ಮಣಿಪ। ಒಲೆ ಉರುವಲು ಆಗಿ, ಮನೆಯ ಪೀಠೋಪಕರಣವೆಯಾಗಿ ಮರವಾಗಿರಬೇಕಿತ್ತು ಜಾಣ ಈ  ಧರೆಯೊಳಗೆ॥

ಗುರು

ಇಮೇಜ್
  ತಿಳಿಯದ ತಿಳಿಸಿ ಪೇಳ್ದವನೇನ್ಗುರುವು? ತಿಳಿದಿಲ್ಲಕೆ ತಿಳಿದಿಲ್ಲವೆಂಬುದು ತಾನರಿಯೆ। ಕೇಳ್ದವಗೆ ಸರಿಯುತ್ತರ ಕೊಟ್ಟವನೇನ್‌ ಗುರುವೆ? ಸರಿಯುತ್ತರ ಹುಡುಕಿಸುವವ ತಾ ಗುರುವು ಸರಿಯೆ॥ ತಿಳಿದಿಲ್ಲದವ ತಿಳಿವಿಲ್ಲವೆಂತಿಳಿಯದವ ತಿಳಿಹೇಳೆ ಗೋರ್ಕಲ್ಲ ಮೇಲ್ಮಳೆ ಸುರಿದಂತೆ। ತಿಳಿದಿಲ್ಲದವ ತಾ ತಿಳಿದಿಲ್ಲೆಂದರಿತು ಕೇಳೆ ತಿಳಿ ಹೇಳೆ ಸಾರ್ಥಕವು ತಿಳಿಯದವಗೆ॥ ತಿಳಿದು ತಿಳಿಯದಂತೆ ನಿದ್ರಿಸಿದವಗೆ ಎಬ್ಬಿಸಿ ತಿಳಿಯಾಗಿಸುವವ ಗುರುವು। ತಿಳಿದು ತಿಳಿದಿರುವುದನರಿತವಗೆ ಶರಣು ಅವನೆ ನಿಜದಿ ಗುರುವು ತಿಳಿಯೊ ಜಾಣ॥

ಮರಳಿತೋ ಯುಗಾದಿ

ಇಮೇಜ್
  Click here for audio recitation 🔊 ಹಳೆಯ ಹಳಿತ ಕಹಿಯ ನೆನಪು, ಹೊಸ ಹೊಸೆದ ಸಿಹಿಯ ಹುರುಪು ತಂದಿತು ಯುಗಾದಿಯು। ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥ ಹಿಂದೆ ತಿರುಗಿ, ಕಳೆದ ನೆನೆದು ಕಲಿತಲ್ಲಿ ಪಾಠವು। ಮುಂದಿನಕೆ ಸಿದ್ದ ಮಾಡಿ ಬಿಚ್ಚಿಟ್ಟ ಗಾಠವು।  ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥ ಕಹಿಯನುಂಡು ಸಿಹಿಯ ಸವೆದ ಸಂಯಮದ ಆಟವು। ಮಾವು ಸೇರಿ ಹುಳಿಯನುಂಡ ಜೀವನದ ಪಾಠವು। ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥ ಯೋಜನೆಗಳ ಯೋಚನೆಗಳ ಪಟ್ಟಿ ಸಾಲು ಸಾಲಿಗೆ। ಕಾಲಕೆಲ್ಲ ಕಾಲ ಹಾಕಿ ನಡೆವ  ಋುತುಚಕ್ರಕೆ। ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥ ಗ್ರಹದ ಗತಿಯನರಿಯಲಾರೆ ಗಿತಿಸುವುದು ಕಾಲ ಖಚಿತವು ಶರಣು ಹೋದೆ ಕಾಲನಡಿಗೆ ಹಸನ ಕಂಡೆ ತುಳಿತದಿಂದ ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥